ಭಾರತದ 10 ರೋಮಾಂಚನಕಾರಿ ಸ್ಥಳಗಳು -19


  ಭಾರತ ಉಪಖಂಡವು ಹಲವಾರು ಮನಮೋಹಕ, ಮೈಮನ ಪುಳಕಿತಗೊಳ್ಳುವ, ರೋಮಾಂಚನ ಉಂಟಾಗುವ ರಮಣೀಯ ಪ್ರಾಕೃತಿಕ ದೃಶ್ಯಗಳನ್ನು ಒಳಗೊಂಡಿದೆ. ಕೆಲವು ನೋಡಿದ ತಕ್ಷಣವೆ ಆನಂದವನ್ನುಂಟು ಮಾಡಿದರೆ, ಇನ್ನೂ ಕೆಲವು ಭೇಟಿ ನೀಡಲೇಬೇಕೆಂಬ ಪ್ರಲೋಭನೆಯನ್ನು ಮನದಾಳದಲ್ಲಿ ಮೂಡಿಸುತ್ತವೆ. ಅದೇನೆ ಇರಲಿ ಇಂತಹ ಪ್ರಾಕೃತಿಕ ನೋಟಗಳು, ರಚನೆಗಳು, ಅಚ್ಚರಿಗಳು ನಮ್ಮನ್ನು ಪ್ರಕೃತಿಯೊಂದಿಗೆ ಮತ್ತಷ್ಟು ಗಾಢವಾಗಿ ಬೆಸೆಯಲು ಸೇತುವೆಗಳಂತೆ ಕಾರ್ಯನಿರ್ವಹಿಸುತ್ತವೆ. ಒತ್ತಡ, ಕಷ್ಟಗಳಿಂದ ಬಸವಳಿದ ದೇಹ ಮನಗಳಿಗೆ ಒಂದು ತೆರನಾದ ಫ್ರೆಶ್ ಭಾವನೆಯನ್ನು ಇಂತಹ ಆಕರ್ಷಣೆಗಳು ಒದಗಿಸುತ್ತವೆ. ಈ ತೆರನಾದ ಹತ್ತು ಪ್ರದೇಶಗಳನ್ನ ನಾವ್ ನಿಮಗೆ ತೋರಿಸ್ತಿದಿವಿ ನೋಡಿ.


10. ಮಾಜುಲಿ ದ್ವೀಪ, ಜೊರ್ಹತ್  


ಅಸ್ಸಾಂ ರಾಜ್ಯದ ಬ್ರಹ್ಮಪುತ್ರ ನದಿಯಲ್ಲಿ ನಿರ್ಮಾಣವಾದ ಈ ದ್ವೀಪವು ಜಗತ್ತಿನಲ್ಲೆ ಅತಿ ದೊಡ್ಡದಾದ ನದಿ ದ್ವೀಪವಾಗಿದೆ. ಈ ಪ್ರದೇಶವನ್ನು ಜೊರ್ಹತ್ ನಗರದಿಂದ ದೋಣಿ ಹಾಗು ಫೆರ್ರಿಗಳ ಮೂಲಕವೆ ತಲುಪಬಹುದಾಗಿದೆ. ಶ್ರೀಮಂತವಾದ ಜಲರಾಶಿ ಹಾಗು ಸಸ್ಯ ಸಂಪತ್ತನ್ನು ಇಲ್ಲಿ ಕಾಣಬಹುದು. ಅಸ್ಸಾಂ ರಾಜ್ಯದಲ್ಲಿರುವ ಮಾಜುಲಿ ಭಾರತದ ಪ್ರಥಮ ದ್ವೀಪ ಜಿಲ್ಲೆ. ಇದು 20ನೇ ಶತಮಾನದ ಆರಂಭದಲ್ಲಿ 1250 ಚದುರ ಕಿ.ಮೀ ಇತ್ತು ಕ್ರಮೇಣ ಭೂ ಸವೆತದಿಂದ ಕೇವಲ 352 ಚದುರ ಕಿ.ಮೀ  ಹೊಂದಿದೆ. ಇದು ದ್ವೀಪ ಜಿಲ್ಲೆ ಎಂಬ ಹೆಗ್ಗಳಿಗೆಯ ಜೊತೆಗೆ ಗಿನ್ನಿಸ್ ಬುಕ್ ರೆಕಾರ್ಡ್ ಗೆ ಪಾಲಾಗಿದೆ. ಇಲ್ಲಿ ಪ್ರವಾಸಕ್ಕಾಗಿ ದೋಣಿ ಸೇವೆಗಳು, ಬಾಡಿಗೆ ಟ್ಯಾಕ್ಸಿ, ಬಸ್ ವ್ಯವಸ್ಥೆ ಇಲ್ಲಿದೆ. ನಿಸರ್ಗದ ಅದ್ಬುತ ತಾಣ ಎನ್ನಬಹುದು ಮಾಜಿಲಿ ದ್ವೀಪವನ್ನ. 

09. ಗಂಗಾ ನದಿಮುಖಜ ಭೂಮಿ, ಹಲ್ದಿಯಾ  


ಸುಂದರಬನ್ಸ್ ಮುಖಜ ಭೂಮಿ ಎಂತಲೂ ಕರೆಯಲ್ಪಡುವ ಇದು ಮುಖ್ಯವಾಗಿ ಗಂಗಾ ಹಾಗು ಬ್ರಹ್ಮಪುತ್ರ ನದಿಗಳ ವಿಶ್ವದ ಅತ್ಯಂತ ಬೃಹತ್ತಾದ ನದಿ ಮುಖಜ ಭೂಮಿ ಎಂಬ ಕೀರ್ತಿಗೆ ಭಾಜನವಾಗಿದೆ. ಗಂಗಾ ನದಿ ಮುಖಜ ಭೂಮಿಯು ಗಂಗಾ ನದಿ, ಬ್ರಹ್ಮಪುತ್ರ ನದಿ, ಪದ್ಮಾ, ಜಮುನಾ ಹಾಗು ಹೂಗ್ಲಿ ನದಿಗಳಿಂದ ನಿರ್ಮಾಣವಾಗಿದೆ.  ಉತ್ತಮ ನದಿ ಮುಖಜ ಭೂಮಿಯ ಜೊತೆಗೆ ಪ್ರವಾಸೋದ್ಯಮದ ಹಲವಾರು ಪ್ರದೇಶಗಳು ಇಲ್ಲಿವೆ. ಭಾರತೀಯರು ಹೆಮ್ಮೆ ಪಡುವಂತಹ ಹಿಂದುಗಳು ಮಾತೃ ಸ್ವರೂಪಿಯಾಗಿ ಕಾಣುವ ಗಂಗಾ ನದಿಯು ಭಾರತದ ರಕ್ತ ನಾಳದಂತೆ ಪಸರಿಸಿದೆ. ಇದನ್ನ ನೋಡುವುದಕ್ಕೆ ಕೇವಲ ಭಾರತೀಯರು ಮಾತ್ರವಲ್ಲ ವಿದೇಶಿಯರು ಇಲ್ಲಿಗೆ ಆಗಮಿಸುತ್ತಾರೆ. ಮೊದಲಿಗಿಂತ ಸುಂದರ ಮತ್ತು ವೈವಿದ್ಯಮಯವಾಗಿದೆ ಗಂಗಾ ನದಿಮುಖಜ ಭೂಮಿ.

08. ಕ್ರೆಮ್ ಲಿಯತ್ ಪ್ರಾಹ್  ಜಯಂತಿಯಾ , ಮೇಘಾಲಯ 


ಮೋಡಗಳ ಮರೆಯಲ್ಲಿ ನೆಲೆಸಿರುವ ಸುಂದರ ರಾಜ್ಯ ಮೇಘಾಲಯ. ಈ ಪ್ರದೇಶವು ತನ್ನಲ್ಲಿರುವ ಪ್ರಾಕೃತಿಕ ಗುಹೆಗಳಿಗೂ ಕೂಡ ಹೆಸರುವಾಸಿಯಾಗಿದೆ. ಆಷ್ಟೆ ಅಲ್ಲ ಇಲ್ಲಿನ ಕಾಡಿನಲ್ಲಿರುವ ಕೆಲವು ಗುಹೆಗಳು ವಿಶ್ವದಲ್ಲೆ ಆಳವಾದ ಗುಹೆಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪಡೆದಿವೆ. ಕ್ರೆಮ್ ಲಿಯತ್ ಪ್ರಾಹ್ ಗುಹೆಯು 31 ಕಿ.ಮೀ ಉದ್ದವಿದ್ದು, ಭಾರತ ಉಪಖಂಡದಲ್ಲೆ ಅತಿ ಉದ್ದನೆಯ ಗುಹೆ ಎಂಬ ಬಿರುದನ್ನು ಪಡೆದಿದೆ.   ನೈಸರ್ಗಿಕವಾಗಿ ಮತ್ತು ಸಹಜವಾಗಿ ನಿರ್ಮಾಣವಾಗಿರುವ ಈ ಗುಹೆಗಳು ಸೃಷ್ಠಿಯ ವೈಚಿತ್ರ ಅಂತಾನೇ ಹೇಳ್ಬೋದು. ಇದನ್ನು ನೋಡಲು ಸಹ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಛಾರಣ ಮಾಡೋದಕ್ಕಂತೂ ಹೇಳಿ ಮಾಡಿಸಿದ ಜಾಗ ಇದು. ಬೆಟ್ಟ ಗುಡ್ಡಗಳ ರಾಜ್ಯ ಮೇಘಾಲಯದಲ್ಲಿ ಈ ಗುಹೆಗಳು ಹೆಚ್ಚು ಪ್ರಚಾರವನ್ನು ಪಡೆದುಕೊಂಡಿವೆ. ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ.

07. ಧನುಷ್ಕೋಡಿ, ರಾಮೇಶ್ವರಂ  


ರಾಮೇಶ್ವರಂ ದ್ವೀಪದ  ದಕ್ಷಿಣದ ತುತ್ತ ತುದಿಯಲ್ಲಿರುವ ಒಂದು ಪಟ್ಟಣವಾಗಿದ್ದು ತಮಿಳುನಾಡು ರಾಜ್ಯದ ಪೂರ್ವ ತೀರದಲ್ಲಿದೆ. ಇಲ್ಲಿ ರಾಮನ ಹಲವಾರು ದೇವಸ್ಥಾನಗಳಿವೆ. ಈ ಹಳ್ಳಿಗೆ ಗುಂಪು ಗುಂಪಾಗಿ ಬೆಳಗ್ಗೆ ಬಮದು ಸೂರ್ಯ ಮುಳುಗುವ ಮುನ್ನ ರಾಮೇಶ್ವರಂಗೆ ತೆರಳುತ್ತಾರೆ. ಈ ಪ್ರದೇಶಕ್ಕೆ ಪ್ರವಾಸಿಗರು ಹೆಚ್ಚಾಗಿಯೇ ಬರುತ್ತಾರೆ. ಇಲ್ಲಿನ ಕೆಲವು ನಿಗೂಡಗಳ ಬಗ್ಗೆ ತಿಳಿದುಕೊಳ್ಳುವುದು ಅವರ ಕೂತೂಹಲದಲ್ಲಿ ಒಂದು. ಭಾರತ ಹಾಗು ಶ್ರೀಲಂಕಾ ದೇಶಗಳ ಮಧ್ಯದಲ್ಲಿ ಸ್ವಾಭಾವಿಕ ಗಡಿಯಂತೆ ನೆಲೆ ನಿಂತಿದೆ ಈ ಕಡಲ ತೀರ. ಈ ಕಡಲ ತೀರದಲ್ಲಿ ಆಳವಾದ ಹಿಂದು ಮಹಾಸಾಗರದ ನೀರು, ಬಂಗಾಳ ಕೊಲ್ಲಿ ಸಮುದ್ರದೊಂದಿಗೆ ಸಮಾಗಮವಾಗುವ ಆಸಕ್ತಿಕರ ನೋಟವನ್ನು ಕಾಣಬಹುದು

06. ಕೋರಲ್ ರೀಫ್, ಅಂಡಮಾನ್  


ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ಭಾರತ ದೇಶಕ್ಕೆ ಸೇರಿದ ಕೇಂದ್ರಾಡಳಿತ ಪ್ರದೇಶಗಳಲ್ಲೋಂದು. ಈ ದ್ವೀಪಗಳು ಬಂಗಾಳಕೊಲ್ಲಿಯಲ್ಲಿವೆ. ಭಾರತದ ಭೂ ಭಾಗದಿಂದ ಸುಮಾರು 1200 ಕಿ.ಮೀ ಹರಡಿಕೊಂಡಿರುವ ಈ ಪ್ರದೇಶವು ಹಲವು ವೈವಿದ್ಯತೆಯಿಂದ ಕೂಡಿದೆ. ಪ್ರವಾಸಕ್ಕೆಂದೆ ಸುಂದರ ತಾಣಗಳನ್ನು ನಿರ್ಮಿಸಿಕೊಂಡು ಪ್ರವಾಸಿಗರಿಗೆ ಆಹ್ವಾನವನ್ನು ನೀಡುತ್ತಿದೆ.   ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ. ಇಲ್ಲಿರುವ ಕಡಲ ತೀರಗಳು ಒಂದು ಉತ್ತಮ ಬಗೆಯ ಅನುಭೂತಿಯನ್ನು ಪ್ರವಾಸಿಗರಿಗೆ ಕರುಣಿಸುತ್ತದೆ. ಇಲ್ಲಿನ ಸಮುದ್ರದಲ್ಲಿರುವ ಕೋರಲ್ ರೀಫ್ ಅಥವಾ ಹವಳದ ಬಂಡೆಗಳಂತೂ ಸಾಗರದಾಳದ ವೈಭೋಗದ ಜೀವನದ ಶೈಲಿಯನ್ನು ಪ್ರತಿಬಿಂಬಿಸುತ್ತದೆ.

05. ದೂಧ್ ಸಾಗರ್ ಜಲಪಾತ, ಗೋವಾ 


ಕರ್ನಾಟಕ ಹಾಗು ಗೋವ ಗಡಿಗಳಲ್ಲಿರುವ ಭಗವಾನ್ ಮಹಾವೀರ್ ಅಭಯಾರಣ್ಯ ಪ್ರದೇಶದಲ್ಲಿ ಈ ಅತ್ಯದ್ಭುತ ಜಲಪಾತ ಕಂಡುಬರುತ್ತದೆ. ಮಾಂಡೋವಿ ನದಿಯಿಂದುಂಟಾಗುವ ಈ ಜಲಪಾತವು ಪ್ರಕೃತಿಯ ಅತ್ಯದ್ಭುತ ಆಕರ್ಷಣೆಗಳಲ್ಲಿ ಒಂದಾಗಿ ನೋಡುವವರ ಮನಗೆಲ್ಲುತ್ತದೆ.  ಪಣಜಿಯಿಂದ ರಸ್ತೆ ಮಾರ್ಗವಾಗಿ ಕೇವಲ 60 ಕಿ.ಮೀ ದೂರದಲ್ಲಿರುವ ದೂದ್ ಸಾಗರ್ ಪ್ರಕೃತಿಯ ರಮಣೀಯ ತಾಣ. ದೂಧ್ ಜಲಪಾತವನ್ನ ನೋಡುವುದಕ್ಕೆ ವಿದೇಶಿಯರು ಬರುತ್ತಾರೆ, ಕನ್ನಡ ಸೇರಿದಂತೆ ಪರಭಾಷೆಯ ಚಿತ್ರಗಳ ಶೂಟಿಂಗ್ ನಡೆದಿದೆ. ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗ ದೂದ್ ಸಾಗರ್. ಮಳೆಗಾಲದಲ್ಲಿ ದೂಮ್ಮಿಕ್ಕಿ ಹರಿಯುವ ದೂದ್ ಸಾಗರ್ ನೋಡುವುದೇ ಒಂದು ಸೊಗಸು.

04. ಮಾಥೇರಾನ್ ಗಿರಿಧಾಮ, ರಾಯಗಡ್  


ಮಹಾರಾಷ್ಟ್ರ ರಾಜ್ಯದ, ರಾಯಗಡ್ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಮಾಥೇರಾನ್ ಭಾರತದಲ್ಲೆ ಅತಿ ಚಿಕ್ಕದಾದ ಗಿರಿಧಾಮವಾಗಿದೆ. ಬೇಸಿಗೆಯ ಸಮಯವನ್ನು ಹೊಡೆದೊಡಿಸಲು ಈ ಪ್ರದೇಶದಲ್ಲೆ ಈ ಗಿರಿಧಾಮವು ಅತಿ ಉತ್ತಮ ಪ್ರದೇಶವಾಗಿದೆ. ಅಲ್ಲದೆ ಭಾರತದಲ್ಲಿರುವ ಆರು ಮೌಂಟೆನ್ ರೈಲುಗಳ ಪೈಕಿ ಇಲ್ಲಿನ ರೈಲು ಕೂಡ ಒಂದು.   ಮಹಾರಾಷ್ಟ್ರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮಾಥೇರಾನ್ ಗಿರಿಧಾಮ ಕೂಡ ಒಂದು ಇದು ಸಮುದ್ರ ಮಟ್ಟದಿಂದ 800 ಮೀಟರ್ ಎತ್ತರದ ಪಶ್ಚಿಮ ಘಟ್ಟಗಳಲ್ಲಿ ಇದೆ. ಮುಂಬೈಯಿಂದ 90 ಕಿ.ಮೀ ಮತ್ತು ಪುಣೆಯಿಂದ 120 ಕಿ.ಮೀ ದೂರದಲ್ಲಿದೆ ಈ ಸುಂದರ ತಾಣ. ಇಲ್ಲಿನ ನಗರ ವಾಸಿಗಳಿಗೆ ಸುಂದರ ತಾಣವಾಗಿರೋದ್ರಿಂದ ವೀಕೆಂಟ್ ನ ಹಾಟ್ ಪ್ಲೇಸ್ ಎನಿಸಿಕೊಂಡಿದೆ. ಈ ಪ್ರದೇಶವನ್ನ ಏಷ್ಯಾದ ಏಕೈಕ ವಾಹನ ಮುಕ್ತ ಗಿರಿಧಾಮವಾಗಿ ಹೆಸರು ಪಡೆದಿದೆ.

03. ಮರಳು ದಿಬ್ಬಗಳು, ಜೈಸಲ್ಮೇರ್  


ರಾಜಸ್ಥಾನ ರಾಜ್ಯದ ರಾಜಧಾನಿಯಾದ ಜೈಪುರ್ ಬಳಿಯಿರುವ ಮತ್ತೊಂದು ಪ್ರಖ್ಯಾತ ಮರಳುಗಾಡು ಪ್ರದೇಶ ಜೈಸಲ್ಮೇರ್. ಇದನ್ನು ಮರಳುಗಾಡಿನ ರತ್ನವೆಂದೂ ಕೂಡ ಸಂಭೋದಿಸಲಾಗುತ್ತದೆ. ಇಲ್ಲಿ ಕಂಡುಬರುವ ಮರಳಿನ ದಿಬ್ಬಗಳು ವಿಶೀಷ್ಟವಾಗಿಯೂ, ಸುಂದರವಾಗಿಯೂ ಗೋಚರಿಸುತ್ತವೆ. ಇದರಲ್ಲಿ ಒಂಟೆ ಸಫಾರಿಯ ಅನುಭವವಂತೂ ಇನ್ನಷ್ಟು ಸುಮಧುರ.  ಜೈಸಲ್ಮೇರ್ ಪ್ರದೇಶವನ್ನು ಗೋಲ್ಡನ್  ನಗರ ಎಂದು ಅಡ್ಡ ಹೆಸರಿನಿಂದ ಕರೆಯಲಾಗುತ್ತೆ. ರಾಜಸ್ಥಾನದ ರಾಜಧಾನಿ ಜೈಪುರ್ ನಗರದಿಂದ 575 ಕಿ.ಮೀ ದೂರದಲ್ಲಿ ಇದೆ. ಇಂದೊಂದು ವಿಶ್ವ ಪರಂಪರೆಯ ತಾಣವಾಗಿ ಹೆಸರು ಗಳಿಸಿದೆ. ಬರಿ ಮರಳು ಗಾಡು ಮಾತ್ರವಲ್ಲದೆ. ಭವ್ಯವಾದ ಅರಮನೆ, ಕೋಟೆ ಕೊತ್ತಲಗಳು ಇಲ್ಲಿನ ಪ್ರಮುಖ ಆಕರ್ಷಣೀಯ ಕೇಂದ್ರಗಳಾಗಿಗೆ.

02. ಝನ್ಸ್ಕಾರ್ ಕಣಿವೆ, ಲಡಾಖ್  


ಭಾರತದ ಅತಿ ದೂರದ ಪ್ರದೇಶಗಳಲ್ಲಿ ಒಂದಾಗಿರುವ ಝನ್ಸ್ಕಾರ್ ಕಣಿವೆಯು ಲಡಾಖ್ ಪ್ರದೇಶದಲ್ಲಿ ಕಂಡುಬರುತ್ತದೆ. ಇದೊಂದು ಪರ್ವತ ಶ್ರೇಣಿಯಾಗಿದ್ದು ಸ್ಪಿತಿ ಹಾಗು ಲಡಾಖ್ ಪ್ರದೇಶಗಳನ್ನು ಒಂದಕ್ಕೊಂಡು ಬೇರ್ಪಡಿಸುತ್ತದೆ. ಹಿಮಾಚಲ ಪ್ರದೇಶದ ಅತಿ ಎತ್ತರದ ಗಿರಿ ಶಿಖರಗಳನ್ನು ಈ ಪರ್ವತ ಶ್ರೇಣಿಯಲ್ಲಿ ಕಾಣಬಹುದು.   ಝನ್ಸ್ಕಾರ್  ಒಂದು ಉಪ ಜಿಲ್ಲೆಯಾಗಿದ್ದು ಕಾರ್ಗಿಲ್  ಜಿಲ್ಲೆಯ ಪೂರ್ವ ಭಾಗದ ದಿಕ್ಕಿಗಿರುವ ಜಮ್ಮು ಕಾಶ್ಮಿರದ ಆಡಳಿತಕ್ಕೆ ಒಳಪಟ್ಟಿರುವ ಪ್ರದೇಶ. 100 ಕಿ.ಮೀ ಅಗಲವಾದ ಜನ್ಸರ್ಕಾರ್ ಶ್ರೇಣಿಯ ಸುಮಾರು 6000 ಮೀ ಎತ್ತರದಲ್ಲಿ ಇರುವ ಪ್ರದೇಶ. ಮೊದಲಿಗಿಂತ ಇಲ್ಲಿನ ಪ್ರವಾಸೋದ್ಯಮ ಉತ್ತಮವಾಗಿದೆ. ರಸ್ತೆಗಳು ಸಾಕಷ್ಟು ಸುಧಾರಿಸಿವೆ ಆದರೂ ಪರ್ವತಗಳ ಕುಸಿತದಿಂದ ಇದು ಒಂದು ಸಮಸ್ಯೆಯಾಗಿ ಬೆಳೆದಿದೆ.

01. ಹಿಮಚ್ಛಾದಿತ ಶೃಂಗಗಳು 


ಉತ್ತರಾಖಂಡ ರಾಜ್ಯದ ಪಿತೋರ್ಗಡ್ ಜಿಲ್ಲೆಯಲ್ಲಿರುವ ಹಿಮಚ್ಛಾದಿತ ಹಿಮಾಲಯ ಪರ್ವತ ಶೃಂಗಗಳು ನೋಡುಗರನ್ನು ಸ್ಥಂಬಿಭೂತರನ್ನಾಗಿ ಮಾಡುತ್ತದೆ. ಅಲ್ಲದೆ ಈ ಗಿರಿ ಪರ್ವತಗಳು ಸಾಹಸಮಯ ಟ್ರೆಕ್ ಕೈಗೊಳ್ಳಲು ಅತ್ಯುತ್ತಮ ಸ್ಥಳಗಳಾಗಿವೆ. ಮುನ್ಶಿಯಾರಿ ಇಂತಹ ಹಲವು ರೋಮಾಂಚಕ ಚಾರಣ ಪಥಗಳ ಆಧಾರ (ಬೇಸ್) ವಾಗಿ ಕಾರ್ಯ ನಿರ್ವಹಿಸುತ್ತದೆ. ಇಲ್ಲಿಂದ ಕಾಣಸಿಗುವ ಸುತ್ತಮುತ್ತಲಿನ ಪ್ರದೇಶಗಳ ನೋಟವು ವರ್ಣಿಸಲಸಾಧ್ಯ.   ಭಾರತದಲ್ಲಿರುವ ಸುಂದರ ಪ್ರದೇಶಗಳ್ಲಲಿ ಒಂದಾಗಿರುವ ಹಿಮಾಲಯ ಪ್ರದೇಶವು ಭಾರತಕ್ಕೆ ಕಳಶ ಪ್ರಾಯದಂತಿದ್ದು ಅನೇಕ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಪ್ರವಾಸಿಗರು ಕೂಡ ತಂಡೋಪ ತಂಡವಾಗಿ ಇಲ್ಲಿಗೆ ಬರುತ್ತಾ ಇದ್ದಾರೆ. ಇನ್ನೂ ಹೆಚ್ಚಿನದಾಗಿ ಹೇಳುವುದಕ್ಕಿಂದ ಆ ರಮಣೀಯ ಸೌಂದರ್ಯವನ್ನ ನೋಡಿ ಸವೆಯಬೇಕು. 
ಮಂಜುನಾಥ್ ಜೈ
manjunathahr1991@gmail.com

ಸಲಹೆ ಮತ್ತು ನಿಮ್ಮ ಅಭಿಪ್ರಾಯಗಳಿಗೆ ದಯವಿಟ್ಟು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25